ಪ್ರಗತಿವಾಣಿ ಕೊಪ್ಪಳ
ಯಲಬುರ್ಗಾ
ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಲಪ್ಪ ಆಚಾರ್ ಮತ್ತೊಮ್ಮೆ ಶಾಸಕರಾಗಲಿ ಎಂದು ಹಾರೈಸಿ ಅಭಿಮಾನಿಯೊಬ್ಬರು ದೀರ್ಘದಂಡ ನಮಸ್ಕಾರ ಹಾಕಿ ಹರಕೆ ಹೊತ್ತಿದ್ದಾನೆ.
ತಾಲೂಕಿನ ಹಿರೇವಡ್ರಕಲ್ ಗ್ರಾಮದ ಬಿಜೆಪಿ ಕಾರ್ಯಕರ್ತ ಹಾಗೂ ಆಚಾರ್ ಕಟ್ಟಾ ಅಭಿಮಾನಿಗಳಾದ ಶಂಕರ ಅಂಗಡಿ, ಹನುಮಂತ ತರಲಕಟ್ಟಿ ಅವರು ಗಂಗಾವತಿ ಸಮೀಪದ ಅಂಜನಾದ್ರಿಯ ಆಂಜನೇಯ ಸ್ವಾಮಿ ದೇವಸ್ಥಾನದ ಸುತ್ತಲೂ ದೀಡ್ ನಮಸ್ಕಾರ ಹಾಕುವ ಮೂಲಕ ಪ್ರಾರ್ಥನೆ ಸಲ್ಲಿಸಿದರು.
ದೇವಸ್ಥಾನದ ವರೆಗೆ ದೀಡ್ ನಮಸ್ಕಾರ ಹಾಕುತ್ತಾ ತೆರಳಿ ನಂತರ ಸ್ವಾಮಿಯ ದರ್ಶನ ಪಡೆದರು.
ಇದಕ್ಕೂ ಮುಂಚೆ ಹಿರೇವಡ್ರಕಲ್ನಿಂದ ಅಂಜನಾದ್ರಿ ವರೆಗೆ ಪಾದಯಾತ್ರೆ ಕೈಗೊಂಡಿದ್ದರು.
ಬಳಿಕ ಶಂಕರ ಅಂಗಡಿ ಮಾತನಾಡಿ, ಸರಳ, ಸಜ್ಜನಿಕೆ ವ್ಯಕ್ತಿತ್ವದ ಹಾಲಪ್ಪ ಆಚಾರ್ ಕ್ಷೇತ್ರವನ್ನು ಸಮಗ್ರ ಅಭಿವೃದ್ಧಿ ಮಾಡಲು ಮತ್ತೊಮ್ಮೆ ಶಾಸಕರಾಗಬೇಕು. ಕೆರೆ ತುಂಬಿಸುವ ಯೋಜನೆ ಮೂಲಕ ತಾಲೂಕಿನ ಕೆರೆಗಳಿಗೆ ನೀರು ತಂದಿದ್ದಾರೆ. ಬಡ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿದ್ದಾರೆ. ರೈತರ ಕಣ್ಮಣಿ, ಜನಪರ, ಅಭಿವೃದ್ಧಿಪರ ಕಾಳಜಿಯುಳ್ಳ ನಾಯಕನ ಗೆಲುವಿಗಾಗಿ ಆಂಜನೇಯನಲ್ಲಿ ಬೇಡಿಕೊಂಡಿದ್ದೇನೆ ಎಂದರು.
ಈ ಸಂದರ್ಭ ಗ್ರಾಮಸ್ಥರಾದ ಮರಿಯಪ್ಪ ಓಲೆಕಾರ, ಹನುಮಂತ ತರಲಕಟ್ಟಿ, ನಿರುಪಾದೆಪ್ಪ ಚೌಡ್ಕಿ, ಮಾರುತಿ ತಳವಾರ್, ದೇವಪ್ಪ ವಡ್ಡರ್, ಬಾಲಪ್ಪ ವಡ್ಡರ್, ಯಮನೂರ ವಡ್ಡರ್, ಷಣ್ಮುಖ ಬಡಿಗೇರ್, ರೇಣುಕಪ್ಪ, ಯಮನೂರ ವಡ್ಡರ್, ನಿಂಗಪ್ಪ ಹುರಳಿ, ವೀರೇಶ ಅಂಗಡಿ ಸೇರಿದಂತೆ ಇತರರಿದ್ದರು
Post a Comment