ಪ್ರಗತಿವಾಣಿ ಕೊಪ್ಪಳ
ಯಲಬುರ್ಗಾ: ಪ್ರತಿಯೊಬ್ಬ ಗ್ರಾಹಕರ ಹಿತರಕ್ಷಣೆಗಾಗಿಯೇ ಪ್ರತ್ಯೇಕ ಕಾನೂನುಗಳನ್ನು ರಚಿಸಲಾಗಿದೆ. ಗ್ರಾಹಕರು ಅವುಗಳ ಸದುಪಯೋಗ ಪಡೆಯಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ವಿಜಯಕುಮಾರ ಕೊಣ್ಣೂರ ಹೇಳಿದರು.
ಪಟ್ಟಣದ ನ್ಯಾಯಾಲಯ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಶ್ವ ಗ್ರಾಹಕರ ಕಾನೂನು ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗ್ರಾಹಕರ ಶೋಷಣೆ ಮತ್ತು ವಂಚನೆ ನಿಲ್ಲಿಸಲು ಕಾನೂನು ರೂಪಿಸಲಾಗಿದೆ. ಗ್ರಾಹಕರು ಖರೀದಿಸುವ ಯಾವುದೇ ವಸ್ತು, ಸರಕು ಅಥವಾ ಪಡೆಯುವ ಸೇವೆಯು ಸುರಕ್ಷಿತವಾಗಿರಬೇಕೆನ್ನುವ ಸಲುವಾಗಿ ಗ್ರಾಹಕ ಹಕ್ಕನ್ನು ಜಾರಿಗೆ ತರಲಾಗಿದೆ. ಯಾವುದೇ ವಸ್ತು ಪಡೆದುಕೊಳ್ಳಬೇಕಾದರೆ ಅದರ ಸಾಧಕ ಬಾಧಕ ಪರಿಶೀಲಿಸಿ ಖರೀದಿಸಬೇಕು. ವಸ್ತು ಖರೀದಿಯಲ್ಲಿ ಮೋಸ ಹೋಗಿದ್ದರೆ, ಜಿಲ್ಲಾ ಗ್ರಾಹಕರ ವೇದಿಕೆಗೆ ಅರ್ಜಿ ಸಲ್ಲಿಸಿ ಪರಿಹಾರ ಪಡೆಯಬಹುದು ಎಂದರು.
ಸಿವಿಲ್ ನ್ಯಾಯಾಧೀಶೆ ಆಯಿಷಾಬಿ ಮಜೀದ್, ಎಪಿಪಿ ಎ.ಎಂ.ಶಂಕರಗೌಡ, ಹಿರಿಯ ವಕೀಲರಾದ ಸಿ.ಎಸ್.ಬನ್ನಪ್ಪಗೌಡ್ರ, ಮಲ್ಲನಗೌಡ ಪಾಟೀಲ್, ರವಿ ಹಾದಿಮನಿ ಮಾತನಾಡಿದರು.
ಹಿರಿಯ ವಕೀಲ ಬಿ.ಎಂ.ಶಿರೂರು ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಸಹಾಯಕ ಸರ್ಕಾರಿ ಅಭಿಯೋಜಕರಾದ ಎ.ಐ.ಹಾದಿಮನಿ, ರವಿ ಹುಣಸಿಮರದ, ಹಿರಿಯ ವಕೀಲ ರಾಮಣ್ಣ ಸಾಲಭಾವಿ, ಕೋರ್ಟ್ ಸಿಬ್ಬಂದಿ ರಾಘವೇಂದ್ರ ಕೋಳಿಹಾಳ, ವಿನಾಯಕ ಸೇರಿದಂತೆ ಇತರರಿದ್ದರು.
-----
Post a Comment