ಪ್ರಗತಿ ವಾಣಿ, ಯಲಬುರ್ಗಾ
ಹಡಪದ ಅಪ್ಪಣ್ಣನವರು ೧೨ನೇ ಶತಮಾನದ ವಚನ ಚಳವಳಿ ಮತ್ತು ಸಾಮಾಜಿಕ ಕ್ರಾಂತಿಯ ಹರಿಕಾರರಲ್ಲಿ ಒಬ್ಬರಾಗಿದ್ದಾರೆ ಎಂದು ತಹಸೀಲ್ದಾರ್ ಶ್ರೀಶೈಲ ತಳವಾರ್ ಹೇಳಿದರು.
ಪಟ್ಟಣದ ಬಯಲು ರಂಗಮಂದಿರದಲ್ಲಿ ತಾಲೂಕಾಡಳಿತದಿಂದ ಬುಧವಾರ ಹಮ್ಮಿಕೊಂಡಿದ್ದ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಗಜ್ಯೋತಿ ಬಸವಣ್ಣನವರ ಜತೆಗೂಡಿ ಸಮಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಅಪ್ಪಣ್ಣನವರ ಆದರ್ಶಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು. ೨೫೦ಕ್ಕೂ ಹೆಚ್ಚು ಕ್ರಾಂತಿಕಾರಿ ವಚನಗಳನ್ನು ರಚಿಸಿ ಸಮಾಜದಲ್ಲಿರುವ ಮೇಲು ಕೀಳನ್ನು ತೊಲಗಿಸಲು ಶ್ರಮಿಸಿದ್ದಾರೆ. ಅಂಥ ಮಹಾನ್ ಶರಣರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದರೆ ಸ್ವಾಸ್ಥ್ಯ ಸಮಾಜ ನಿರ್ಮಾಣ ಸಾಧ್ಯ ಎಂದರು.
ಶರಣರು, ಸಂತರು ಜಾತಿಗೆ ಸೀಮಿತವಾದವರಲ್ಲ. ಮನುಕುಲದ ಉದ್ಧಾರಕ್ಕಾಗಿ ಜೀವ ಸವೆಸಿದ ಶರಣರ ಸ್ಮರಣ ಅಗತ್ಯ ಎಂದರು.
ಶಿಕ್ಷಕ ಬಸವರಾಜ ಕೊಂಡಗುರಿ ಹಡಪದ ಅಪ್ಪಣ್ಣನವರ ಕುರಿತು ವಿಶೇಷ ಉಪನ್ಯಾಸ ನೀಡಿದರು. ಸಮುದಾಯದ ತಾಲೂಕು ಅಧ್ಯಕ್ಷ ಶಿವಪ್ಪ ಶಾಸ್ತ್ರೀ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಪಪಂ ಸದಸ್ಯ ವಸಂತ ಬಾವಿಮನಿ, ತಾಲೂಕು ಮಟ್ಟದ ಅಧಿಕಾರಿಗಳಾದ ವಿ.ಕೆ.ಬಡಿಗೇರ್, ಮಂಜುನಾಥ ಲಿಂಗಣ್ಣನವರ್, ಪ್ರಾಣೇಶ ಹಾದಿಮನಿ, ಸುನೀಲ್ ಚಿತ್ರಗಾರ್, ಪದ್ಮನಾಭ ಕರ್ಣಂ, ಜಯಲಕ್ಷ್ಮಿ, ಅಶೋಕ ಗೌಡರ, ಶಿಕ್ಷಕರಾದ ಬಸವರಾಜ ಅಂಗಡಿ, ಮೆಹಬೂಬ್ ಬಾದಷಾ, ತಹಸಿಲ್ ಸಿಬ್ಬಂದಿ ಶ್ರೀಧರಗೌಡ, ಪ್ರಮುಖರಾದ ನೀಲಪ್ಪ ತಳಕಲ್, ಶರಣಪ್ಪ ಹಡಪದ, ಮಲ್ಲಿಕಾರ್ಜುನ ಹಡಪದ, ಪ್ರಭುರಾಜ ಹಡಪದ, ಈರಪ್ಪ ಹಡಪದ, ಗುಂಡಪ್ಪ ಸೇರಿದಂತೆ ಇನ್ನಿತರರಿದ್ದರು.
-----
Post a Comment